ಶ್ರೀ ವಿರಕ್ತ ಮಠ, ಹರವೆ

ವಿಳಾಸ:

ನಿ.ಪ್ರ.ಸ್ವ. ಶ್ರೀ ಸರ್ಪಭೂಷಣಸ್ವಾಮಿಗಳವರು, ವಿರಕ್ತ ಮಠ, ಹರವೆ, ಹರವೆ ಹೋಬಳಿ, ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆ – 571128.
ಮೊ. +919964151105, +919886956983

ಮಠದ ವಿವರ:

ಚಾಮರಾಜನಗರ ತಾಲ್ಲೂಕಿನ ಹರವೆ ಗ್ರಾಮದಲ್ಲಿರುವ ಶ್ರೀ ವಿರಕ್ತ ಮಠವು ಸುಮಾರು ಸುಮಾರು 17ನೇ ಶತಮಾನದಲ್ಲಿ ಸ್ಥಾಪನೆಯಾಗಿದೆ. ಮಠದ ಮೂಲಗುರುಗಳಾದ ಶ್ರೀ ಚನ್ನಬಸವ ಸ್ವಾಮಿಗಳು ಊರಿನ ಜನರಲ್ಲಿ ಧರ್ಮ ಜಾಗೃತಿ ಮೂಡಿಸಿ ಲಿಂಗಾಯತ ಧರ್ಮ ಮತ್ತು ಶರಣ ತತ್ವವನ್ನು ಸಾರಿದರು. ಕಾಯಕವೇ ಕೈಲಾಸ ಎಂಬಂತೆ ಕೃಷಿ ಕಾಯಕದಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಊರಿನ ಜನರಿಗೆ ಮಾದರಿಯಾಗಿದ್ದರು. ಮಠದ ಸುತ್ತಲೂ ಕೊಟ್ಟಿಗೆ ಕಟ್ಟಿಸಿ ಕೃಷಿ ಸಲುವಾಗಿ ಜಾನುವಾರುಗಳನ್ನು ಸಾಕಿದ್ದರು. ಶ್ರೀಗಳ ಜೊತೆ ದೈವಾಂಶ ಸಂಭೂತರಾದ ಮುನೀಶ್ವರರು ಏಕಾಂತದಲ್ಲಿ ಮಾತನಾಡುತ್ತಿದ್ದರು ಎಂಬ ಪ್ರತೀತಿ ಇದೆ. ಮಠದಲ್ಲಿ ಇಂದಿಗೂ ಪ್ರತೀ ಅಮಾವಾಸ್ಯೆಯ ದಿನ ಮುನೀಶ್ವರರಿಗೆ ಎಡೆ ಇಡುವ ಪದ್ಧತಿ ಚಾಲ್ತಿಯಲ್ಲಿದೆ.
ಶ್ರೀ ಚನ್ನಬಸವ ಸ್ವಾಮಿಗಳು ಲಿಂಗೈಕ್ಯರಾದ ನಂತರ ಅವರ ಪೂರ್ವಾಶ್ರಮದ ಸಂಬಂಧಿಗಳಾಗಿದ್ದ ಶ್ರೀ ಶಿವಲಿಂಗೇಂದ್ರ ಸ್ವಾಮಿಗಳು ಅಧಿಕಾರ ವಹಿಸಿಕೊಂಡು ಕೆಲವು ವರ್ಷಗಳ ಕಾಲ ಮಠವನ್ನು ಸಮರ್ಥವಾಗಿ ಮುನ್ನಡೆಸಿದರು. ನಂತರ ಶ್ರೀ ಶ್ರೀಕಂಠ ಸ್ವಾಮಿಗಳನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ನೇಮಿಸಿ ಲಿಂಗೈಕ್ಯರಾದರು. ಶ್ರೀ ಶ್ರೀಕಂಠ ಸ್ವಾಮಿಗಳು ಹರವೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಂಚರಿಸಿ ಎಲ್ಲೆಡೆಯೂ ಧರ್ಮಪ್ರಚಾರ ಮಾಡಿ ಮಠದ ಕೀರ್ತಿಯನ್ನು ಎತ್ತರಕ್ಕೊಯ್ದರು. ಕ್ರಿ.ಶ. 1930ರಲ್ಲಿ ಲಿಂಗೈಕ್ಯರಾದರು.
ನಂತರ ಇದೇ ವಂಶಪರಂಪರೆಯಲ್ಲಿ ಅವರ ಸಹೋದರ ಶ್ರೀ ರುದ್ರಪ್ಪದೇವರು ಮತ್ತು ಶ್ರೀಮತಿ ಶಿವಲಿಂಗಮ್ಮನವರ ಸುಪುತ್ರರಾದ ಶ್ರೀ ಶಿವನಂಜ ಸ್ವಾಮಿಗಳು 1934 ರಲ್ಲಿ ಶ್ರೀಮಠದ ಉತ್ತರಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡರು. ಶ್ರೀಗಳು ತುಮಕೂರಿನ ಶ್ರೀ ಸಿದ್ದಗಂಗಾ ಮಠದಲ್ಲಿ ಸಂಸ್ಕೃತ ಮತ್ತು ವೇದ ಅಧ್ಯಯನ ಮಾಡಿದರು. ನಡೆದಾಡುವ ದೇವರೆಂದೇ ಪ್ರಖ್ಯಾತರಾದ ಶ್ರೀ ಶಿವಕುಮಾರ ಸ್ವಾಮಿಗಳವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಅಲ್ಲದೆ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಹಾಗೂ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ನಿಕಟವರ್ತಿಗಳಾಗಿದ್ದರು. ಅವರ ನಡುವೆ ಅಪಾರ ಸಲುಗೆ -ಅಭಿಮಾನ-ಪ್ರೀತಿ- ವಿಶ್ವಾಸಗಳಿದ್ದವು. ಶ್ರೀ ಶಿವನಂಜ ಸ್ವಾಮಿಗಳು ಉತ್ತಮ ವಾಗ್ಮಿಗಳಾಗಿದ್ದು ತಮ್ಮ ಸರಳ-ನೇರ ನುಡಿಗಳಿಂದ ಹಾಗೂ ತಮ್ಮ ಹಾಸ್ಯಭರಿತ ಭಾಷಣಗಳಿಂದ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯಾದ್ಯಂತ ಪ್ರಸಿದ್ಧರಾಗಿದ್ದರು. ಶ್ರೀಗಳಿಗೆ ಧಾರ್ಮಿಕ ಹಾಗೂ ಸಾಮಾಜಿಕ ಅಭಿವೃದ್ಧಿಯ ಬಗ್ಗೆ ಅಪಾರ ಕಳಕಳಿ ಇತ್ತು. ಶ್ರೀಗಳು ಹರವೆ ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಮೂರು ಎಕರೆ ಜಮೀನು ಮತ್ತು ವಿನೋಬಾ ಭಾವೆಯವರ ಭೂದಾನ ಚಳುವಳಿಯಿಂದ ಪ್ರಭಾವಿತರಾಗಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಜಮೀನನ್ನು ದಾನ ನೀಡಿದ್ದಾರೆ.
ಅಲ್ಲದೆ ಸರ್ಕಾರಿ ಆಸ್ಪತ್ರೆಗೆ ಜಾಗ ಕೊಟ್ಟಿದ್ದಾರೆ ಮತ್ತು ಪಶುವೈದ್ಯ ಶಾಲೆಗೆ ಕಟ್ಟಡವನ್ನು ಕಟ್ಟಿಸಿಕೊಟ್ಟಿದ್ದಾರೆ. ಶ್ರೀಗಳು ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿ 2000ನೇ ಇಸವಿಯಲ್ಲಿ ಲಿಂಗೈಕ್ಯರಾದರು. ಶ್ರೀ ಶಿವನಂಜ ಸ್ವಾಮಿಗಳ ಕರಕಮಲ ಸಂಜಾತರಾಗಿ ಶ್ರೀಮಠದ ಅಧಿಕಾರ ವಹಿಸಿಕೊಂಡವರು ನಿ.ಪ್ರ.ಸ್ವ ಶ್ರೀ ಸರ್ಪಭೂಷಣ ಸ್ವಾಮಿಗಳು.
ಇವರು ಹರವೆ ಮಠದ ಶ್ರೀ ಶಿವಲಿಂಗ ಸ್ವಾಮಿ ಮತ್ತು ಶ್ರೀಮತಿ ನಾಗರತ್ನಮ್ಮನವರ ಸುಪುತ್ರರು. ಇವರು ಪುರಾತನ ಪರಂಪರೆಯ ಮಠವನ್ನು ಎಲ್ಲಿಯೂ ಕುಂದುಂಟಾಗದಂತೆ ಮುನ್ನಡೆಸುತ್ತಿದ್ದಾರೆ. ಚಾಮರಾಜನಗರದಲ್ಲಿಯೂ ಮಠದ ಶಾಖೆಯನ್ನು ತೆರೆದು ಅಲ್ಲಿಯೂ ಧಾರ್ಮಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿದ್ದಾರೆ. ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲೆಂದು ಶ್ರೀ ಚನ್ನಬಸವೇಶ್ವರ ಪ್ರತಿಷ್ಠಾನ ಎಂಬ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಒಂದರಿಂದ 10ನೇ ತರಗತಿಯವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣವನ್ನು ನೀಡುತ್ತಿದ್ದಾರೆ. ಇದರಲ್ಲಿ ಈತನಕ ಗ್ರಾಮೀಣ ಪ್ರದೇಶದ ಸಾವಿರಾರು ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆದಿದ್ದಾರೆ. ಅಲ್ಲದೆ ಸಂಸ್ಕೃತ ಮತ್ತು ವೇದ ಪಾಠಶಾಲೆಯನ್ನು ತೆರೆದಿದ್ದಾರೆ. ಶ್ರೀಮಠದ ವತಿಯಿಂದ
    • ಉಚಿತ ಸಾಮೂಹಿಕ ವಿವಾಹ
    • ಉಚಿತ ಆರೋಗ್ಯ ತಪಾಸಣಾ ಶಿಬಿರ
    • ಉಚಿತ ರಕ್ತದಾನ ಶಿಬಿರ
ಮುಂತಾದ ಹತ್ತು ಹಲವು ಜನೋಪಯೋಗಿ ಕಾರ್ಯಕ್ರಮಗಳು ವರ್ಷವಿಡೀ ನಡೆಯುತ್ತಿರುತ್ತವೆ.
    • ಈಗಲೂ ಕೃಷಿ ಆಧಾರಿತವಾಗಿಯೇ ಮಠವನ್ನು ಅಭಿವೃದ್ಧಿ ಪಡಿಸುತ್ತಿರುವ ಶ್ರೀಗಳು ಜಾನುವಾರುಗಳ ಸಲುವಾಗಿ ಗೋಶಾಲೆಯನ್ನು ತೆರೆದಿದ್ದಾರೆ.
    • ಬಡ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯವನ್ನು ಪ್ರಾರಂಭಿಸಿದ್ದಾರೆ.
ಮುಂದೆ ಉನ್ನತ ಶಿಕ್ಷಣಕ್ಕಾಗಿ ಕಾಲೇಜನ್ನು ತೆರೆಯಬೇಕೆಂಬ ಅಭಿಲಾಷೆ ಹೊಂದಿದ್ದಾರೆ. ಒಟ್ಟಾರೆ ಪ್ರಸ್ತುತ ಶ್ರೀಗಳ ಅವಧಿಯಲ್ಲಿ ಶ್ರೀಮಠವು ಸರ್ವತೋಮುಖವಾಗಿ ಸಾಕಷ್ಟು ಪ್ರಗತಿಯನ್ನು ಕಾಣುತ್ತಿದೆ.

ಪರಂಪರೆ:

  1. ನಿ.ಪ್ರ.ಸ್ವ. ಶ್ರೀ ಚನ್ನಬಸವ ಸ್ವಾಮಿಗಳು
  2. ನಿ.ಪ್ರ.ಸ್ವ. ಶ್ರೀ ಶಿವಲಿಂಗೇಂದ್ರ ಸ್ವಾಮಿಗಳು
  3. ನಿ.ಪ್ರ.ಸ್ವ. ಶ್ರೀ ಶ್ರೀಕಂಠ ಸ್ವಾಮಿಗಳು
  4. ನಿ.ಪ್ರ.ಸ್ವ. ಶ್ರೀ ಶಿವನಂಜ ಸ್ವಾಮಿಗಳು
  5. ನಿ.ಪ್ರ.ಸ್ವ. ಶ್ರೀ ಸರ್ಪಭೂಷಣ ಸ್ವಾಮಿಗಳು (ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

  • ಅಮಾವಾಸ್ಯೆ ವಿಶೇಷ ಪೂಜೆ
  • ಕಾರ್ತಿಕ ಮಾಸ ಪೂಜೆ
  • ಕಾರ್ತಿಕ ಸೋಮವಾರ ದೀಪಾಲಂಕಾರ
  • ಪೂಜ್ಯರ ಸ್ಮರಣೋತ್ಸವ
  • ಶಿವರಾತ್ರಿ ಪೂಜೆ

ಸಾಮಾಜಿಕ ಕಾರ್ಯಗಳು:

ಶ್ರೀ ಚನ್ನಬಸವೇಶ್ವರ ಪ್ರತಿಷ್ಠಾನದ ಅಡಿಯಲ್ಲಿ ನಡೆಯುತ್ತಿರುವ ಸಂಸ್ಥೆಗಳು
  • ಪೂರ್ವ ಪ್ರಾಥಮಿಕ ಶಾಲೆ
  • ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆ
  • ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ
  • ಆಂಗ್ಲ ಮಾಧ್ಯಮ ಪ್ರೌಢಶಾಲೆ
  • ಸಂಸ್ಕೃತ ಪಾಠ ಶಾಲೆ
  • ವಿದ್ಯಾರ್ಥಿ ನಿಲಯ